ರಾಜ್ಯದ 17 ಡಿಸಿಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಸಂವಾದ: ಜಿಲ್ಲಾಧಿಕಾರಿಗಳೇ ಕೋವಿಡ್ ವಿರುದ್ಧ ಹೋರಾಟದ ಯುದ್ಧ ಕಮಾಂಡರ್ ಗಳು! | ಜನತಾ ನ್ಯೂಸ್
ನವದೆಹಲಿ: : ಕೊರೊನಾ ಸೋಂಕು ಇಡೀ ದೇಶವ್ಯಾಪಿಯಾಗಿ ಕಾಡುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ನಾನಾ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ನಲ್ಲಿ ರಾಜ್ಯದ 17 ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದರು.
ಭಾರತಕ್ಕೆ ಕೋವಿಡ್ ಎರಡನೇ ಅಲೆ ಹರಡುತ್ತಿದ್ದು, ಈ ಸಂದರ್ಭದಲ್ಲಿ ಕೋವಿಡ್ ವಿರುದ್ಧ ಹೋರಾಟ ನಡೆಸಲು ನಿಮ್ಮೆಲ್ಲರ ಪಾತ್ರ ತುಂಬಾ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಈ ಹೋರಾಟದಲ್ಲಿ ನೀವು(ಜಿಲ್ಲಾಧಿಕಾರಿಗಳು) ಯುದ್ಧ ಕಮಾಂಡರ್ ಗಳಾಗಬೇಕು ಎಂದು ಪ್ರಧಾನಿ ಹೇಳಿದರು.
ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಕೃಷಿ ಕ್ಷೇತ್ರವನ್ನು ಬಂದ್ ಮಾಡಿರಲಿಲ್ಲವಾಗಿತ್ತು. ಈ ವೇಳೆ ಗ್ರಾಮಸ್ಥರು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕಾರ್ಯನಿರ್ವಹಿಸುವುದನ್ನು ಕಂಡು ಅಚ್ಚರಿಗೊಳಗಾಗಿರುವುದಾಗಿ ಪ್ರಧಾನಿ ತಿಳಿಸಿದರು.
ಇದೇ ವೇಳೆ 17 ಜಿಲ್ಲೆಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು ಸಂವಾದದಲ್ಲಿ ಪಾಲ್ಗೊಂಡಿದ್ದು, ಉತ್ತರ ಕನ್ನಡ, ಹಾಸನ, ಬಳ್ಳಾರಿ, ಮೈಸೂರು, ತುಮಕೂರು, ಕೋಲಾರ, ಕೊಡಗು, ಬೆಂಗಳೂರು ನಗರ, ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಧಾರವಾಡ, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ, ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ, ಜಿಲ್ಲೆಗಳ ಕೊರೊನಾ ಸ್ಥಿತಿಗತಿ, ನಿರ್ವಹಣೆ ಬಗ್ಗೆ ಪ್ರಧಾನಿ ಮಾಹಿತಿ ಪಡೆದು ಕೊಂಡಿದ್ದಾರೆ.
ಕೋವಿಡ್ ವಿರುದ್ಧ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೆಲವರು ಅಧಿಕಾರಿಗಳು ಸ್ವತಃ ಕೋವಿಡ್ ಪೀಡಿತರಾಗಿದ್ದಾರೆ. ಇನ್ನೂ ಕೆಲವರು ತಮ್ಮ ಕುಟುಂಬದವರನ್ನು ಕಳೆದುಕೊಂಡಿದ್ದಾರೆ. ಆದರೂ ಅವರ್ಯಾರೂ ಧೃತಿಗೆಡದೆ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಆಯಾ ಸ್ಥಳೀಯ ಸಂದರ್ಭಗಳಿಗೆ ಹೊಂದುವ, ನವೀನ ರೀತಿಯ ಕ್ರಮಗಳನ್ನು ಕೈಗೊಳ್ಳಲು ನೀವು ಸ್ವತಂತ್ರರು. ಈಗ ಜಾರಿಗೊಳಿಸಿರುವ ನೀತಿಯಲ್ಲಿ ಏನಾದರೂ ಬದಲಾವಣೆಗಳು ಅಗತ್ಯವಿದೆ ಎಂದು ಅನಿಸಿದಲ್ಲಿ, ಯಾವುದೇ ಹಿಂಜರಿಕೆ ಇಲ್ಲದೇ ತಿಳಿಸಬೇಕು ಎಂದು ಅವರು ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದರು.
ಲಸಿಕೆ ವ್ಯರ್ಥವಾಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಸುತ್ತಾ ಕರೊನಾ ವಿಚಾರದಲ್ಲಿ ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳುತ್ತಾ ಜಿಲ್ಲಾಧಿಕಾರಿಗಳಿಗೆ ಫ್ರೀ ಹ್ಯಾಂಡ್ ಕೊಟ್ಟರು. ಪಿಎಂ ಕೇರ್ಸ್ ಫಂಡ್ನಿಂದ ದೇಶದ ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಿ, ಲಸಿಕೆ ನೀಡಿಕೆ ಶೆಡ್ಯೂಲ್ 15 ದಿನ ಮುಂಚಿತವಾಗಿ ರಾಜ್ಯಗಳಿಗೆ ತಿಳಿಸಲು ಸೂಚನೆ ನೀಡಿದರು. ಕೊವಿಡ್ ಲಸಿಕೆ ಪೋಲಾಗದಂತೆ ತಡೆಯಬೇಕು. ಆಸ್ಪತ್ರೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತವಾಗದಂತೆ ನೋಡಿಕೊಳ್ಳಿ. ದೇಶವನ್ನು ಈ ಸಂಕಷ್ಟದಿಂದ ಹೊರಗೆ ತರಬೇಕೆಂಬುದು ನನ್ನ ಸೂಚನೆ ಎಂದು ತಿಳಿಸಿದರು.